Friday, September 2, 2011

ಎಲ್ಲಾ ಕಡೆಯೂ ಸಲ್ಲುವ ದ್ರಾವಿಡ್


ಶ್ರೇಷ್ಠತೆಗೆ ದೇಶ-ಕಾಲ-ಸಂದರ್ಭವೆಂಬುದಿಲ್ಲ.
ಶ್ರೇಷ್ಠರಿಗೂ ಅಷ್ಟೇ.
ಶ್ರೇಷ್ಠರು ಯಾವಾಗಲೂ ಶ್ರೇಷ್ಠರೇ.
ಇಂಗ್ಲೆಂಡ್ ವಿರುದ್ಧ ಏಕೈಕ ಟಿ20 ಪಂದ್ಯದಲ್ಲಿ ರಾಹುಲ್ ದ್ರಾವಿಡ್ ನಿರೂಪಿಸಿದ್ದೂ ಅದನ್ನೇ.
ಅದು ಅವರ ವೃತ್ತಿಜೀವನದ ಚೊಚ್ಚಲ ಟಿ20 ಅಂತಾರಾಷ್ಟ್ರೀಯ ಪಂದ್ಯವಾಗಿತ್ತು.
ಅದು ಭಾರತದ ಪರ ಅವರ ಪಾಲಿಗೆ ಕೊನೆಯ ಟಿ20 ಪಂದ್ಯವೂ ಆಗಿತ್ತು.
ಭಾರತದ ಪರ 1996ರಲ್ಲಿ ಟೆಸ್ಟ್ ಪದಾರ್ಪಣೆಗೈದ 15 ವರ್ಷದ ಬಳಿಕ ದ್ರಾವಿಡ್ ಈ ವಿಶೇಷ ಪಂದ್ಯವನ್ನು ಆಡಿದ್ದರು.
ಹಾಗೆ ನೋಡಿದರೆ, ಟಿ20 ಮಾದರಿ ರಾಹುಲ್ ಗೆ ಅಪರಿಚಿತವೇನೂ ಆಗಿರಲಿಲ್ಲ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ 3 ವರ್ಷ ಹಾಗೂ ರಾಜಸ್ಥಾನ ರಾಯಲ್ಸ್ ಪರ ಒಂದು ವರ್ಷ ಐಪಿಎಲ್ ಆಡಿರುವ ದ್ರಾವಿಡ್ ಕ್ರಿಕೆಟ್ ನ ಕಿರು ಮಾದರಿಗೆ ಹೊಸಬರೇನೂ ಆಗಿರಲಿಲ್ಲ. ಅಲ್ಲದೆ ಅವರು ನಿರೂಪಿಸುವಂಥದ್ದೂ ಏನೂ ಇರಲಿಲ್ಲ.
ಬದಲಿಗೆ 2007ರಲ್ಲಿ ಚೊಚ್ಚಲ ಟಿ20 ವಿಶ್ವಕಪ್ ಗೆ ಸ್ವತಃ ಭಾರತ ತಂಡದಿಂದ ಹೊರಗುಳಿದಿದ್ದ ಅವರು ಮುಂದೆ ಆಡುವಂಥ ಪ್ರಮೇಯ ಒದಗಿಬಂದಿರಲಿಲ್ಲ.
2009ರ ಚಾಂಪಿಯನ್ಸ್ ಟ್ರೋಫಿ ಬಳಿಕ ಏಕದಿನ ತಂಡದಿಂದಲೂ ಹೊರಗುಳಿಯುವುದರೊಂದಿಗೆ ದ್ರಾವಿಡ್ ಟಿ20 ಕ್ರಿಕೆಟ್ ಗೆ ಭಾರತ ತಂಡಕ್ಕೆ ಪರಿಗಣನೆಯಲ್ಲಿರಲೇ ಇಲ್ಲ.
ಆದರೆ, ಹಾಲಿ ಇಂಗ್ಲೆಂಡ್ ಪ್ರವಾಸದಲ್ಲಿ ದ್ರಾವಿಡ್ ಟಿ20 ತಂಡದಲ್ಲೂ ಆಡುವಂಥ ಪ್ರಸಂಗ ಎದುರಾಯಿತು. ಟೆಸ್ಟ್ ಸರಣಿಯಲ್ಲಾದಂತೆ ಈ ಪಂದ್ಯದಲ್ಲೂ ಭಾರತದ ಬ್ಯಾಟ್ಸ್ ಮನ್ ಗಳು ದಯನೀಯ ವೈಫಲ್ಯ ಅನುಭವಿಸಿದ್ದರಿಂದ ಭಾರತ ಈ ಪಂದ್ಯವನ್ನು ಸೋಲಬೇಕಾಯಿತು. ಆದರೆ, ದ್ರಾವಿಡ್ ತಮ್ಮ ಚಿಕ್ಕ ಚೊಕ್ಕ ಆಟದ ಮೂಲಕ ಹೃದಯವನ್ನಂತೂ ಗೆದ್ದರು.
ದ್ರಾವಿಡ್ ಆರಂಭದಲ್ಲಿ 14 ಎಸೆತಗಳಲ್ಲಿ 10 ರನ್ ಗಳಿಸಿದ್ದ ಸಂದರ್ಭದಲ್ಲಿ ಹಿರಿಯ ಆಟಗಾರನಿಗೆ ಕಿರಿ ಮಾದರಿಯ ಅಗ್ನಿಪರೀಕ್ಷೆ ಇದೆನಿಸಿತ್ತು. ಆದರೆ,ಮುಂದಿನ ಐದೇ ಎಸೆತಗಳಲ್ಲಿ ಚಿತ್ರಣವೇ ಬದಲಾಗಿತ್ತು. ಸಮಿತ್ ಪಟೇಲ್ ರ ಒಂದೇ ಓವರ್ ನಲ್ಲಿ ಸತತ 3 ಸಿಕ್ಸರ್ ಸಹಿತ ದ್ರಾವಿಡ್ 21 ರನ್ ಬಾಚಿದ್ದರು (ಇನ್ನೊಂದು ರನ್ ರಹಾನೆ ಹೊಡೆದರು. ಆ ಓವರ್ ನಲ್ಲಿ ಒಟ್ಟು 22 ರನ್). ದ್ರಾವಿಡ್ ಸತತ 3 ಸಿಕ್ಸರ್ ಚಚ್ಚುತ್ತಿರುವಾಗಲಂತೂ ನಂಬಲಾಗದಂಥ ಅನುಭವ. ಏಕದಿನ ಕ್ರಿಕೆಟ್ ನಲ್ಲಿ ಭಾರತದ ಪರ 2ನೇ ಅತ್ಯಂತ ವೇಗದ ಅರ್ಧ ಶತಕ ಬಾರಿಸಿದ್ದರೂ ರಕ್ಷಣಾತ್ಮಕ ಬ್ಯಾಟ್ಸ್ ಮನ್ ಆಗಿಯೇ ವರ್ಚಸ್ಸು ಬೆಳೆಸಿಕೊಂಡಿರುವ ದ್ರಾವಿಡ್, ವೃತ್ತಿಜೀವನದಲ್ಲಿ ಸತತ 3 ಸಿಕ್ಸರ್ ಬಾರಿಸಿದ್ದು ಬಹುಶಃ ಇದೇ ಮೊದಲ ಬಾರಿ ಇರಬೇಕು. ಆದರೆ, ಆ ಮೂರು ಎಸೆತಗಳಲ್ಲಿ ತಾವು ಕೇವಲ ಟೆಸ್ಟ್ ಅಥವಾ ಏಕದಿನಗಳಿಗೆ ಮಾತ್ರ ಸಲ್ಲುವವರಲ್ಲ. ಟಿ20 ಮಾದರಿಯಲ್ಲೂ ಸಲ್ಲುತ್ತೇನೆ ಎಂದು ನಿರೂಪಿಸಿಬಿಟ್ಟರು. ತಂಡದ ಬ್ಯಾಟ್ಸ್ ಮನ್ ಗಳು ಪೂರ್ಣ 20 ಓವರ್ ಸಹ ಆಡುವುದು ಸಾಧ್ಯವಾಗದೆ ಆಲೌಟ್ ಆದರೂ ತಂಡ 165 ರನ್ ಗಳಿಸಿದ್ದರೆ ಅದರಲ್ಲಿ ದ್ರಾವಿಡ್ 3 ಎಸೆತದಲ್ಲಿ ಗಳಿಸಿದ 18 ರನ್ ಗಳ ಪಾತ್ರ ದೊಡ್ಡದು. ಅದಿಲ್ಲವಾದರೆ ಭಾರತದ ಮೊತ್ತ 140-142 ಆಗಿರುತ್ತಿತ್ತೇನೋ.
ಟಿ20 ಕ್ರಿಕೆಟ್ ಎಂದರೆ ತಾಂತ್ರಿಕತೆಯ ಬಗ್ಗೆ ಯೋಚಿಸದೆ ಮೊದಲ ಎಸೆತದಿಂದಲೇ ಹೊಡೆ-ಬಡಿ ಆಟಕ್ಕಿಳಿಯುವುದೇನೋ ಸರಿಯೇ. ಆದರೆ, ಇಲ್ಲಿಯೂ ಪ್ರಾರಂಭದಲ್ಲಿ ಕೆಲವು ಎಸೆತ ಎಚ್ಚರಿಕೆಯಿಂದ ಆಡಿದ ಮೇಲೂ ನಂತರ ಆ ಕೊರತೆ ನೀಗಿಸಬಹುದು ಎಂದು ದ್ರಾವಿಡ್ 21 ಎಸೆತಗಳ 31 ರನ್ ಆಟದಿಂದ ನಿರೂಪಿಸಿದರು. ಒಟ್ಟಾರೆ ಮಾದರಿ ಆಟಗಾರ ದ್ರಾವಿಡ್ ರ ಅಂದಿನ ಆಟ ಮಾದರಿಯಾಗಿತ್ತು.
ಭಾರತ ಸುಲಭವಾಗಿ 180-190 ರನ್ ಗಳಿಸಬಹುದಾಗಿದ್ದ ಇನಿಂಗ್ಸ್ ಅದಾಗಿತ್ತಾದರೂ ಇಂಗ್ಲೆಂಡ್ ನ ಪಿಚ್ ಎಂಬ ಗುಮ್ಮ ವಿರಾಟ್ ಕೊಹ್ಲಿ, ರೋಹಿತ್ ಶರ್ಮ, ಸುರೇಶ್ ರೈನಾ ಮೊದಲಾದವರನ್ನು ಕಾಡಿದ್ದರಿಂದ ತಂಡ ಮುಗ್ಗರಿಸಿತು. ಭಾರತದ ಟಿ20 ಸ್ಕೀಮ್ ನಲ್ಲೇ ಇಲ್ಲದ ಅಜಿಂಕ್ಯ ರಹಾನೆ ಅನಿರೀಕ್ಷಿತವಾಗಿ ದೊರೆತ ಅವಕಾಶ ಸಾರ್ಥಕ ಪಡಿಸಿಕೊಂಡಿದ್ದರಿಂದ ತಂಡ ಗೌರವಾನ್ವಿತ ಮೊತ್ತ ಪೇರಿಸುವುದು ಸಾಧ್ಯವಾಯಿತು. ಇಲ್ಲದಿದ್ದರೆ....
ಇಂಗ್ಲೆಂಡ್ ಪ್ರವಾಸದಲ್ಲಿ ಭಾರತೀಯರ ಆಟದಷ್ಟೇ, ತಂಡದ ಆಯ್ಕೆಯೂ ಕಳಪೆ. ಟಿ20 ವಿಶ್ವ ಚಾಂಪಿಯನ್ ಇಂಗ್ಲೆಂಡ್ ವಿರುದ್ಧ ಆಡುವಾಗ ಭಾರತ ಪೂರ್ಣ ಸಾಮರ್ಥ್ಯದ ಟಿ20 ತಂಡವನ್ನೇ ಕಣಕ್ಕಿಳಿಸಬೇಕಿತ್ತು. ಅದಕ್ಕಾಗಿ ಒಂದಿಬ್ಬರು ಆಟಗಾರರನ್ನು ಈ ಪಂದ್ಯಕ್ಕೆಂದೇ ಇಂಗ್ಲೆಂಡ್ ಗೆ ಕರೆಸಿಕೊಂಡಿದ್ದರೆ ಅದರಿಂದ ಬಿಸಿಸಿಐ ಬೊಕ್ಕಸವೇನೂ ಬರಿದಾಗುತ್ತಿರಲಿಲ್ಲ. ಆದರೆ, ಟಿ20 ತಜ್ಞ ಆಟಗಾರರಾದ ಯೂಸುಫ್ ಪಠಾಣ್, ಅಂಬಟಿ ರಾಯುಡು, ಮನೀಶ್ ಪಾಂಡೆ, ರಾಬಿನ್ ಉತ್ತಪ್ಪ, ಮನೋಜ್ ತಿವಾರಿ, ಬದ್ರಿನಾಥ್ (ಚೆನ್ನೈ ಸೂಪರ್ ಕಿಂಗ್ಸ್ ಪರ ಆಟ ಮಾನದಂಡ), ಮೊದಲಾದವರು ದೇಶದಲ್ಲೇ ಉಳಿದರೆ, ಪಾರ್ಥಿವ್ ಪಟೇಲ್, ರಹಾನೆ ಮತ್ತು ದ್ರಾವಿಡ್ ಮೊದಲ 3 ಕ್ರಮಾಂಕದಲ್ಲಿ ಆಡಿದ್ದರು.
ಹೋಗಲಿ, ಒಬ್ಬ ಆಟಗಾರ ಗಾಯಗೊಂಡಾಗ ಆತನಿಗೆ ಬದಲಿ ಆಯ್ಕೆ ಮಾಡುವುದಕ್ಕೂ ಒಂದು ರೀತಿ-ನೀತಿ ಬೇಡವೇ? ಆರಂಭಿಕ ಆಟಗಾರ ಗೌತಮ್ ಗಂಭೀರ್ ಬದಲಿಗೆ ಆಲ್ರೌಂಡರ್ (?) ರವೀಂದ್ರ ಜಡೇಜಾರನ್ನು ಆಯ್ಕೆ ಮಾಡಿದ್ದು ಸರಿಯೇ? ಅಷ್ಟಕ್ಕೂ ಐಪಿಎಲ್ ನಂತರ ಮನೆಯಲ್ಲಿ ಕುಳಿತಿದ್ದ ಜಡೇಜಾ ಬದಲು ಇತ್ತೀಚೆಗೆ ಆಸ್ಟ್ರೇಲಿಯಾದಲ್ಲಿ ಉದಯೋನ್ಮುಖರ ಕ್ರಿಕೆಟ್ ಟೂರ್ನಿ ಆಡಿ ಬಂದಿದ್ದವರನ್ನೇ ಒಬ್ಬರನ್ನು ಕಳಿಸಬಹುದಿತ್ತು. ಆದರೆ, ಆರ್ ಪಿ ಸಿಂಗ್ ರನ್ನು ಇತ್ತೀಚೆಗೆ ಆಯ್ಕೆ ಮಾಡಿದ್ದಂತೆ ಜಡೇಜಾ ವಿಷಯದಲ್ಲೂ ಆಯ್ಕೆಗಾರರು ಕೋಟಾ ಪದ್ಧತಿ ಅನುಸರಿಸಿರಬಹುದು.
ಸದ್ಯದಲ್ಲೇ ಕೆ. ಶ್ರೀಕಾಂತ್ ಬದಲು ಬೇರೊಬ್ಬರು ರಾಷ್ಟ್ರೀಯ ಮುಖ್ಯ ಆಯ್ಕೆಗಾರರಾಗಿ ನೇಮಕಗೊಳ್ಳಲಿದ್ದಾರೆ. ಕಳೆದ ಮೂರ್ನಾಲ್ಕು ವರ್ಷಗಳಲ್ಲಿ ಶ್ರೀಕಾಂತ್ ಮಾಡಿದ ಬ್ಲಂಡರ್ ಗಳಿಂದ ನೂತನ ಆಯ್ಕೆಗಾರರು ಪಾಠ ಕಲಿತಿದ್ದರೆ ಒಳಿತು.
ಏಕೆಂದರೆ ಎಲ್ಲರಿಗೂ ಶ್ರೀಕಾಂತ್ ಗಿದ್ದಂತ ಅದೃಷ್ಟವಂತೂ ಇರುವುದಿಲ್ಲ....


No comments:

Post a Comment